ತುಕಾರಾಂ ರಾಜೀನಾಮೆಗೆ ಬಿಜೆಪಿಯ ಬಂಗಾರು ಹನುಮಂತು ಆಗ್ರಹ
ನ್ಯೂಸ್ ಡೆಸ್ಕ್ ಉತ್ತರ ಕರ್ನಾಟಕ :ಸಂಸದ ತುಕರಾಂ ಅವರಿಗೆ ಸಮಾಜದ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ದರೆ, ಸಮಾಜದ ಬಗ್ಗೆ ನಂಬಿಕೆ, ಗೌರವ ಇದ್ದರೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಎಸ್.ಟಿ. ಮೋರ್ಚಾ ರಾಜ್ಯ ಅಧ್ಯಕ್ಷ ಬಂಗಾರು ಹನುಮಂತು ಆಗ್ರಹಿಸಿದ್ದಾರೆ.
ತುಕರಾಂ ರಾಜೀನಾಮೆಗೆ ಆಗ್ರಹಿಸಿ ಮತ್ತು ರಾಹುಲ್ ಗಾಂಧಿಯವರ ಮೀಸಲಾತಿ ರದ್ದತಿ ಕುರಿತ ಹೇಳಿಕೆಯನ್ನು ಖಂಡಿಸಿ ಮುಂದಿನ ಮಂಗಳವಾರ ಬಿಜೆಪಿ ಎಸ್.ಟಿ. ಮೋರ್ಚಾ ವತಿಯಿಂದ ಸಂಡೂರಿನಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳುತ್ತೇವೆ ಎಂದು ಹೇಳಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣದ ಅವ್ಯವಹಾರ ನಡೆದಿದ್ದು, ಆ ಹಣವನ್ನು ಪ್ರತಿ ಬೂತಿಗೆ ₹25 ಸಾವಿರದಂತೆ ಹಂಚಿದ್ದಾರೆ. ಪ್ರತಿ ಮತಕ್ಕೆ ₹200 ಹಂಚಲಾಗಿದೆ ಎಂದು ಆರೋಪಮಾಡಿದರು.
‘ನಿಮ್ಮ ಪಕ್ಷದ ನಾಯಕ ರಾಹುಲ್ ಗಾಂಧಿಯವರಿಗೆ ಬಳ್ಳಾರಿ ಮೇಲೆ ಎಲ್ಲಿಲ್ಲದ ಪ್ರೀತಿ. ಒಂದೆಡೆ ಅದು ಗಣಿಗಾರಿಕೆ ಪ್ರದೇಶ; ಇನ್ನೊಂದೆಡೆ ಅವರ ತಾಯಿ ಬಳ್ಳಾರಿಯಿಂದ ಸ್ಪರ್ಧಿಸಿದ್ದರು. ಅದೇ ನಂಟಿನ ಕಾರಣಕ್ಕೆ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯನವರು ನಾಗೇಂದ್ರರ ಮೇಲೆ ಒತ್ತಡ ಹಾಕಿ ವಾಲ್ಮೀಕಿ ನಿಗಮದ ಹಣವನ್ನು ಲೂಟಿ ಮಾಡಿಸಿದ್ದರು. ಆ ದುಡ್ಡನ್ನು ಚುನಾವಣೆಗೆ ಬಳಸಿಕೊಂಡಿದ್ದರು’ ಎಂದು ಆರೋಪಿಸಿದರು