ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 16ನೇ ಹಣಕಾಸು ಆಯೋಗದ ಅಧ್ಯಕ್ಷ ಡಾ. ಅರವಿಂದ ಪನಗಾರಿಯ ಹಾಗೂ ಸದಸ್ಯರೊಂದಿಗೆ ಸಭೆ ನಡೆಸಿ 15ನೇ ಹಣಕಾಸು ಆಯೋಗದಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯ ಸರಿಪಡಿಸುವಂತೆ ಆಗ್ರಹಿಸಿದ್ದಾರೆ.
ಸಚಿವ ಸಂಪುಟದ ಸದಸ್ಯರು, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಹಣಕಾಸು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ಸರ್ಕಾರದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ರಾಜ್ಯದ ಮನವಿಯನ್ನು ಆಯೋಗದ ಅಧ್ಯಕ್ಷ ಡಾ. ಅರವಿಂದ ಪನಗಾರಿಯ ಅವರಿಗೆ ಮುಖ್ಯಮಂತ್ರಿ ಹಸ್ತಾಂತರಿಸಿದರು.
ಹಣಕಾಸು ಆಯೋಗದೊಂದಿಗೆ ಇಂದಿನ ನಮ್ಮ ಚರ್ಚೆಗಳು ಎದುರಿಸುತ್ತಿರುವ ಮಹತ್ವದ ಸವಾಲುಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ನಿರ್ಣಾಯಕ ಹೆಜ್ಜೆಯಾಗಲಿವೆ ಎಂದಿದ್ದಾರೆ.
ಸಂವಿಧಾನದ 280 ನೇ ವಿಧಿಯು ಕೇಂದ್ರ ಮತ್ತು ರಾಜ್ಯಗಳ ನಡುವೆ ತೆರಿಗೆ ಆದಾಯವನ್ನು ಹಂಚಿಕೊಳ್ಳಲು ಶಿಫಾರಸು ಮಾಡಲು ಪರಿಣಿತ, ಸ್ವತಂತ್ರ ಮತ್ತು ನಿಷ್ಪಕ್ಷಪಾತ ಸಂಸ್ಥೆಯಾಗಿ ಹಣಕಾಸು ಆಯೋಗದ ನೇಮಕವನ್ನು ಕಡ್ಡಾಯಗೊಳಿಸುತ್ತದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಕರ್ನಾಟಕವು ರಾಷ್ಟ್ರೀಯ ಜಿಡಿಪಿಗೆ 8.4% ಕೊಡುಗೆ ನೀಡುತ್ತದೆ. ದೇಶಕ್ಕೆ ಒಟ್ಟು ಜಿಎಸ್ಟಿ ಕೊಡುಗೆಯಲ್ಲಿ 2 ನೇ ಸ್ಥಾನದಲ್ಲಿದೆ. ಪ್ರತಿ ವರ್ಷ ಕರ್ನಾಟಕವು 4 ಲಕ್ಷ ಕೋಟಿ ರೂಪಾಯಿ ನೀಡಿದರೂ ಕರ್ನಾಟಕ ಕೊಡುವ ಪ್ರತಿ ರೂಪಾಯಿಗೆ 15 ಪೈಸೆ ಮಾತ್ರ ಮರಳುತ್ತಿದೆ ಎಂದು ಆಯೋಗದ ಗಮನ ಸೆಳೆದಿದ್ದಾರೆ.
ಸೆಸ್ಗಳು ಮತ್ತು ಸರ್ಚಾರ್ಜ್ಗಳ ವಿಚಾರಕ್ಕೆ ಬಂದರೆ ನಮ್ಮ ರಾಜ್ಯಕ್ಕೆ ನಷ್ಟವು ರೂ. 2017-18 ರಿಂದ 2024-25 ರ ಅವಧಿಯಲ್ಲಿ 53,359 ಕೋಟಿ ರೂ. ನಷ್ಟವಾಗಿದೆ. ಬಂಡವಾಳ ವೆಚ್ಚದಲ್ಲಿ ರಾಜ್ಯ ಪ್ರಥಮ ಸ್ಥಾನದಲ್ಲಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.